ಮಣ್ಣಿನ ಅರಮನೆ ಎಂದು ಕರೆಯಲ್ಪಡುವ ಸೂರಾಲು ಅರಮನೆಯು ಉಡುಪಿ ಜಿಲ್ಲೆಯ ಕೊಕ್ಕರ್ಣೆ ಸಮೀಪದ ಸೂರಾಲು ಎಂಬ ಊರಿನಲ್ಲಿದೆ . ಇದು ಒಂದು ಪ್ರಾಚೀನವಾದ ಅರಮನೆ. ಈ ಅರಮನೆಯು ಸರಿಸುಮಾರು ೫೦೦ ವರ್ಷಗಳಷ್ಟು ಹಳೆಯದ್ದು . == ಕರ್ನಾಟಕದ ಏಕೈಕ ಮಣ್ಣಿನ ಅರಮನೆ == ೫೦೦ ವರ್ಷಗಳ ಇತಿಹಾಸವಿರುವ ಸೂರಾಲು ಅರಮನೆ ಕರ್ನಾಟಕದಲ್ಲಿ ಉಳಿದಿರುವ ಏಕೈಕ ಮಣ್ಣಿನ ಅರಮನೆ . ಕರುನಾಡಿನ ಅರಸರು ನಿರ್ಮಿಸಿದ್ದ ಹಲವು ಅರಮನೆಗಳು ನಶಿಸಿ ಹೋಗಿವೆ. ಸೂರಾಲು ಅರಮನೆಯ ಗೋಡೆಗಳನ್ನು ಮಣ್ಣಿನಿಂದ ನಿರ್ಮಿಸಲಾಗಿದೆ. == ಇತಿಹಾಸ == ಕ್ರಿ.ಶ.೧೫೦೦ ರಲ್ಲಿ ನಿರ್ಮಾಣವಾದ ಈ ಅರಮನೆಯನ್ನು ತೋಳಾರ ಅರಸರು ನಿರ್ಮಿಸಿದ್ದರು. ತೋಳರ ಜೊತೆ ಹೋರಾಡಿ ಜಯಿಸಿದರಿಂದ ಅವರಿಗೆ ತೋಳಾರು ಎಂಬ ಹೆಸರು ಬಂತು. ಸೂರಾಲು ತೋಳಾರ ರಾಜಧಾನಿಯಾಗಿತ್ತು. ಸೂರಾಲು ಅರಸರು ಸಾಮಂತ ರಾಜರಾಗಿದ್ದರು. ವಿಜಯನಗರ ಅರಸರು ಬಾರಕೂರಿನ ಅರಸರಿಗೆ ಸಾಮಂತರು. ಬಾರಕೂರಿನ ಅರಸರಿಗೆ ಸೂರಾಲು ಅರಸರು ಸಾಮಂತರು. ಕರಾವಳಿಯ ತುಳು ಅರಸರ ಶ್ರೀಮಂತ ಆಳ್ವಿಕೆಗೆ ಸಾಕ್ಷಿಯಾಗಿ ಉಳಿದಿರುವ ಕೊಡುಗೆಗಳಲ್ಲಿ ಈ ಅರಮನೆ ಕೂಡ ಒಂದು. ಸುಮಾರು ೧೫ ನೇ ಶತಮಾನದ ಹಿಂದೆ ಜೈನ ಅರಸರು ನಿರ್ಮಿಸಿದ್ದ ೧೨ ಅರಮನೆಗಳಲ್ಲಿ ಈಗ ಉಳಿದಿರುಹುದು ಸೂರಾಲು ಅರಮನೆ ಮಾತ್ರ. ಈ ಅರಮನೆಯನ್ನು ಸಂಪೂರ್ಣವಾಗಿ ಮರ ಮತ್ತು ಮಣ್ಣಿನಿಂದ ಮಾಡಲಾಗಿದೆ. ಸುಟ್ಟ ಆವೆ ಮಣ್ಣಿನಿಂದ ಅರಮನೆಯ ಗೋಡೆಯನ್ನು ಕಟ್ಟಲಾಗಿದೆ. ಅರಮನೆಯ ವಾಸ್ತುಶಿಲ್ಪ ಹಿಂದೂ - ಜೈನ ಸಂಪ್ರದಾಯ ಎರಡನ್ನೂ ಒಳಗೊಂಡಿದೆ . ರಾಜೇಂದ್ರ ತೋಳಾರರ ಅಳಿಯ ನಾಗೇಂದ್ರ ತೋಳಾರರು ಅಮುಜಿಯಲ್ಲಿ ಶಿವನ ದೇವಾಸ್ಥಾನವನ್ನು ಕಟ್ಟಿಸಿದರು. ದೇವಾಸ್ಥಾನದ ಪ್ರಸಾದವನ್ನು ಭಟ್ಟರು ರಾಜರಿಗೆ ತಂದು ಕೊಡುವಾಗ ತಲೆಕೂದಲು ಇತ್ತು. ಇದರಿಂದ ರಾಜರು ಕೋಪಗೊಳ್ಳುತ್ತಾರೆ. ಭಟ್ಟರಿಗೆ ಏನು ಹೇಳಬೇಕೆಂದು ತೋಚದೆ ಅದು ದೇವರ ತಲೆಕೂದಲು ಎಂದು ಹೇಳುತ್ತಾರೆ. ಅಮುಜಿಗೆ ನಾನು ಬರತ್ತೇನೆ ನನಗೆ ದೇವರ ತಲೆಯಲ್ಲಿ ತಲೆಕೂದಲು ತೋರಿಸಬೇಕು ಎಂದು ರಾಜರು ಹೇಳುತ್ತಾರೆ. ಭಟ್ಟರು ದೇವರ ಬಳಿ ಹೋಗಿ ನಾನು ಬಾಯಿ ತಪ್ಪಿ ಏನೋ ಹೇಳಿದೆ ಈಗ ನೀನೆ ಕಾಪಾಡಬೇಕು ಎಂದು ಬೇಡಿಕೊಳ್ಳುತ್ತಾರೆ.ರಾಜರು ದೇವಾಸ್ಥಾನಕ್ಕೆ ಬಂದು ಪೂಜೆ ಮಾಡುವಾಗ ದೇವರ ತಲೆಯಿಂದ ಕೂದಲು ಬೀಳುತ್ತದೆ. ಅಲ್ಲಿಂದ ಅಮುಜಿಯಲ್ಲಿನ ದೇವಾಸ್ಥಾನಕ್ಕೆ ಸಿರಿಮುಡಿ ಮಹಾಲಿಂಗೇಶ್ವರ ದೇವಾಸ್ಥಾನ ಎಂದು ಹೆಸರು ಬಂತು. ಸೂರಾಲಿನ ಅರಮನೆಯ ಬಳಿ ಮಹಾಲಿಂಗೇಶ್ವರ ದೇವಾಸ್ಥಾನ ಇದೆ. ಆ ದೇವಾಸ್ಥಾನ ಸುಮಾರು ೧೫೦೦ ವರ್ಷಗಳಷ್ಟು ಹಳೆಯದು. ದೇವಾಸ್ಥಾನವು ಅರಮನೆಯ ರಾಜರಿಗೆ ಸಂಬಂಧಪಟ್ಟದು. ಅರಸರು ದೇವಾಸ್ಥಾನದ ಮೂಕ್ತೇಸರು ಆಗಿದ್ದರು. ಉತ್ಸವದ ಸಮಯದಲ್ಲಿ ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಕೊಡೆ ಹಿಡಿದುಕೊಂಡು ದೇವಾಸ್ಥಾನಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಕುಕ್ಕೆಹಳ್ಳಿ ಮಹಾಲಿಂಗೇಶ್ವರ ದೇವಾಸ್ಥಾನ, ಸೂರಾಲು ಮಹಾಲಿಂಗೇಶ್ವರ ದೇವಾಸ್ಥಾನ, ಶಿರೂರು(ಮುದ್ದು ಮನೆ) ಮಹಾಲಿಂಗೇಶ್ವರ ದೇವಾಸ್ಥಾನ ಈ ಮೂರು ದೇವಾಸ್ಥಾನ ಒಬ್ಬನೆ ರಕ್ಕಸ ಪ್ರತಿಷ್ಠಾಪನೆ ಮಾಡಿದ ಕ್ಷೇತ್ರ.ಸೂರಾಲು ಅರಮನೆಯ ರಾಜರು ಪೆರ್ಡೂರು ಅನಂತ ಪದ್ಮನಾಭ ದೇವಾಸ್ಥಾನಕ್ಕೆ ಸ್ವರ್ಣದ ಕವಚ ಮಾಡಿದ್ದರು. ಕೊಕ್ಕರ್ಣೆಯಲ್ಲಿ ಇರುವ ಮೊಗವೀರ ಪೇಟೆ ಸೂರಾಲು ಅರಮನೆಗೆ ಸಂಬಂಧಪಟ್ಟದ್ದು. ಕಾಲಭೈರವ ಕೆಂಪ್ಪಣ್ಣನಾಗಿ ಅರಮನೆಯಲ್ಲಿ ಆಶ್ರಯ ಪಡೆದಿದ್ದರು. ಭೂತಗಳೆಲ್ಲ ದಾಳಿ ಮಾಡಿದಾಗ ಕೆಂಪ್ಪಣ್ಣ ತನ್ನ ನಿಜ ಸ್ವರೂಪವನ್ನು ತೋರಿಸುತ್ತಾನೆ. == ಅರಮನೆಯ ಸೊಬಗು == ಈ ಅರಮನೆಯ ಒಳಗೆ ಹೋದರೆ ಹಳೆಕಾಲದ ವೈಭವದ ಕುರುಹುಗಳನ್ನು ಕಾಣಬಹುದು. ಅರಮನೆಯ ಪ್ರವೇಶದ ಹೆಬ್ಬಾಗಿಲಿನ ಚಾವಡಿಯ ಜೊತೆಗೆ ಪೆರ್ಡೂರು ಮಾಗಣೆ ಚಾವಡಿ , ಪಟ್ಟದ ಚಾವಡಿಯನ್ನು ಸಹ ಕಾಣಬಹುದು . ಆಗಿನ ಕಾಲದಲ್ಲಿ ಅರಮನೆಯ ಹೆಬ್ಬಾಗಿಲಿನಲ್ಲಿ ನ್ಯಾಯ ಪಂಚಾಯಿತಿಕೆ ಮಾಡುತ್ತಿದ್ದರು. ಅರಮನೆಯೊಳಗೆ ಪದ್ಮಾವತಿ ಮಂದಿರವಿದೆ. ಆ ಕಾಲದಲ್ಲಿ ವಾಸವಿದ್ದ ಅರಸರ ಆರಾಧ್ಯ ದೇವತೆಗಳಾಗಿದ್ದರು. == ಅರಮನೆಗೆ ಹೋಗುವ ಮಾರ್ಗ == ಸೂರಾಲು ಅರಮನೆ ಉಡುಪಿಯಿಂದ ೨೮ ಕಿಮೀ ದೂರವಿದೆ. ಉಡುಪಿ ಜಿಲ್ಲೆಯ ಕೊಕ್ಕರ್ಣೆ ಗ್ರಾಮದಲ್ಲಿರುವ ಈ ಅರಮನೆ ಸೂರಾಲು ಎಂಬ ಹಳ್ಳಿಯಲ್ಲಿದೆ. ಬಸ್ ಮೂಲಕ ಸಾಗಿ ಅರಮನೆ ನೋಡಲು ಬಯಸುವವರು ಉಡುಪಿಯ ಸರ್ವೀಸ್ ಬಸ್ ನಿಲ್ದಾಣದಲ್ಲಿ ನಿಗದಿತ ಬಸ್‌ಗಳಿವೆ.ಸಂಜೆ ಮೇಲೆ ಬಸ್ ಇರುವುದು ಸ್ವಲ್ಪ ಕಡಿಮೆ. ಬಾರಕೂರಿನಿಂದ ಸಹ ಸೂರಾಲು ಅರಮನೆಗೆ ಹೋಗಬಹುದು. == ಫೋಟೋ ಗ್ಯಾಲರಿ == == ಉಲ್ಲೇಖಗಳು ==